ಪಟ್ಟಣದ ಹೊರ ವಲಯದಲ್ಲಿರುವ ಲೊಯೋಲ ಶಾಲೆಯಲ್ಲಿ ಶಾಲಾ ಸಂಸ್ಥಾಪಕರ ದಿನಾಚರಣೆ ಹಾಗೂ ನೂತನ ಶಾಸಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ ಅವರಿಗೆ ಸನ್ಮಾನಿಸಲಾಯಿತು.
ಸಿಂದಗಿ: ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಈ ಶಿಕ್ಷಣ ಸಂಸ್ಥೆಯು ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುವುದರೊಂದಿಗೆ ಸಮಾಜ ಸೇವೆಯಂತಹ ಉದಾತ್ತ ಕಾರ್ಯ ಈ ಸಂಸ್ಥೆಯಿಂದ ನಡೆಯುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿರುವ ಲೊಯೋಲ ಶಾಲೆಯಲ್ಲಿ ಶಾಲಾ ಸಂಸ್ಥಾಪಕರ ದಿನಾಚರಣೆ ಹಾಗೂ ನೂತನ ಶಾಸಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ತಂದೆಯವರು ಗ್ರಾಮ ಸೇವಕರಾಗಿದ್ದ ಅವಧಿಯಲ್ಲಿ ಗ್ರಾಮೀಣ ಭಾಗದ ಜನರ ತೊಂದರೆಯನ್ನು ಮನಗಂಡು ಅವರಿಗೆ ಶಿಕ್ಷಣ ನೀಡುವ ಸಲುವಾಗಿ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಜನರಿಗೆ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾದರು. ಅವರು ಸಚಿವರಾಗಿದ್ದಾಗ ಸಿಂದಗಿಗೆ ನೀರಿನ ಸೌಲಭ್ಯವನ್ನು ಒದಗಿಸಿಕೊಡುವುದಲ್ಲದೇ, ಸಮಗ್ರ ಅಭಿವೃದ್ಧಿಗಾಗಿ ಕ್ರಮ ಕೈಗೊಂಡರು. ಅವರ ಮತ್ತು ಜನತೆಯ ಆಶೀರ್ವಾದದಿಂದ ಈ ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನಾನು ಸಿಂದಗಿ ತಾಲೂಕಿನ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುವವರ ಜೊತೆಗೆ ಸಿಂದಗಿಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಗುರಿಯನ್ನು ಹೊಂದಿದ್ದೇನೆ ಎಂದರು.
ಈ ವೇಳೆ ಪ್ರಾಚಾರ್ಯ ವಂದನೀಯ ಪಾಧರ್ ಲ್ಯಾನ್ಸಿ ಫರ್ನಾಂಡಿಸ್ ಅವರು ಮಾತನಾಡಿ, ತಂದೆಯಂತೆ ಮಗನು ಸಹ ರಾಜಕೀಯ ಕ್ಷೇತ್ರದಲ್ಲಿ ಛಾಪು ಮೂಡಿಸಲಿ. ಅಶೋಕ ಮನಗೂಳಿ ಅವರು ಸಹಕಾರ ಮೂರ್ತಿಗಳು, ಅಭಿವೃದ್ಧಿಯ ಹರಿಕಾರರು. ಅವರು ಪ್ರಗತಿಪರ ಚಟುವಟಿಕೆಗಳ ಮೂಲಕ ಸಿಂದಗಿಯ ಶಾಶ್ವತ ಶಾಸಕರಾಗಿ ಉಳಿಯುತ್ತಾರೆ ಎಂಬ ಭರವಸೆ ನನ್ನದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರರು ಎಂಬ ಪ್ರಶಸ್ತಿಯನ್ನು ಪಡೆದುಕೊಂಡ ವರದಿಗಾರ ರಮೇಶ ಪೂಜಾರಿಯವರನ್ನು, ಪೋಷಕ ಶಿಕ್ಷಕರ ಸಭೆಯ ಅಧ್ಯಕ್ಷ ಮೊಹಮ್ಮದ್ ಪಟೇಲ್ ಬಿರಾದಾರ ಹಾಗೂ ಉಪಾಧ್ಯಕ್ಷ ನಾಗೇಶ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಫಾದರ್ ಸಂತೋಷ್, ಫಾದರ್ ರೊನಾಲ್ಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮೇಘಾ ಹಾಗೂ ಉಜಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಶಾನ್ ಸ್ವಾಗತಿಸಿದರು. ಜೋಶ್ನಾ ವಂದಿಸಿದರು
Leave a Reply